ವಿಭಾಗದ ಬಗ್ಗೆ
ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಜಾಗೃತ) ಕಛೇರಿಯ ಮುಖ್ಯಸ್ಥರಾಗಿದ್ದು, ಇವರ ಸಹಾಯಕರಾಗಿ ಪ್ರಧಾನ ಕಚೇರಿಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿ (ಜಾಗೃತ) ರವರು ಕರ್ತವ್ಯ ನಿರ್ವಹಿಸುತ್ತಾರೆ. ರಾಜ್ಯಾದ್ಯಂತ ಹನ್ನೊಂದು ಅರಣ್ಯ ಸಂಚಾರಿ ದಳ ಉಪ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಜಾಗೃತ ಘಟಕದ ಆಧೀನದಲ್ಲಿ ಕಾರ್ಯನಿರ್ವಹಿಸುತ್ತಿವೆ. ಅರಣ್ಯ ಸಂಚಾರಿ ದಳ ಪ್ರಾದೇಶಿಕ ವಿಭಾಗಗಳು ಹಾಗೂ ವನ್ಯಜೀವಿ ವಿಭಾಗಗಳ ಸಹಕಾರದೊಂದಿಗೆ ಅರಣ್ಯ ಸಂಪತ್ತು ರಕ್ಷಣೆ, ಮರಕಳ್ಳತನ ಅಕ್ರಮ ವನ್ಯಪ್ರಾಣಿಗಳ ಕಳ್ಳಬೇಟೆ ತಡೆಗಟ್ಟುವ ಕರ್ತವ್ಯವನ್ನು ನಿರ್ವಹಿಸುತ್ತವೆ. ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಹಗಲು ಮತ್ತು ರಾತ್ರಿಯ ಸಮಯದಲ್ಲಿ ತಮ್ಮ ಆಡಳಿತ ವ್ಯಾಪ್ತಿಗೆ ಸೇರಿದ ಪ್ರದೇಶಗಳಲ್ಲಿ ಗಸ್ತು ಕಾರ್ಯವನ್ನು ನಿರ್ವಹಿಸುತ್ತಾರೆ. ಇಲಾಖೆಯು ಸ್ವೀಕರಿಸಿದ ವಿವಿಧ ದೂರು ಅರ್ಜಿಗಳ ತನಿಖೆಯನ್ನು ಜಾಗೃತದಳವು ಕೈಗೊಂಡಿರುತ್ತದೆ. ದೋಷಪೂರಿತ ಅಧಿಕಾರಿಗಳ, ಸಿಬ್ಬಂದಿಗಳ ವಿರುದ್ಧ ಬಂದ ದೂರರ್ಜಿಗಳ ಬಗ್ಗೆ ಸತ್ಯಾಸತ್ಯತೆಯ ವಿಚಾರಿಸಿ ಮೇಲಧಿಕಾರಿಗಳಿಗೆ ಮಹಿತಿ ಹಾಗೂ ಮುಂದಿನ ಕ್ರಮಕ್ಕಾಗಿ ಸಲ್ಲಿಸಲಾಗುತ್ತಿದೆ. ಅರಣ್ಯ ಇಲಾಖೆಯ ಕ್ಷೇತ್ರ ಸಿಬ್ಬಂದಿಗಳಿಗೆ ಕಠಿಣ ಅರಣ್ಯ ಪ್ರದೇಶಗಳಲ್ಲಿ ಇತರೆ ಸಿಬ್ಬಂದಿಗಳೊಂದಿಗೆ ಹಾಗೂ ಅವರ ಕೇಂದ್ರ ಸ್ಥಾನದೊಂದಿಗೆ ಸಂಪರ್ಕವನ್ನು ಸಾಧಿಸಲು ನಿಸ್ತಂತು ಉಪಕರಣಗಳನ್ನು ಸರಬರಾಜು ಮಾಡುತ್ತದೆ. ಅಲ್ಲದೇ, ಅರಣ್ಯ ಸಿಬ್ಬಂದಿಗಳಿಗೆ ಅರಣ್ಯ ರಕ್ಷಣೆ ಸಲುವಾಗಿ ಹಾಗೂ ಕಾಡು ಪ್ರಾಣಿಗಳ ಬೇಟೆ ಮಾಡುವವರ ವಿರುದ್ಧ ಹಾಗೂ ಕಾಡು ಪ್ರಾಣಿಗಳ ವಿರುದ್ಧ ಆತ್ಮ ರಕ್ಷಣೆಗಾಗಿ ಸಿಬ್ಬಂದಿಗಳಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಲಾಗುತ್ತದೆ.